ನನ್ನ ಪುತ್ರ ಅಭ್ಯರ್ಥಿ ಆಗಲ್ಲ, ಅಭ್ಯರ್ಥಿ ಬಗ್ಗೆ ವರಿಷ್ಠರ ನಿರ್ಧಾರವೇ ಅಂತಿಮ
ಈಗ ಜಾತಿ, ಹಿಂದ ಏನೂ ಇಲ್ಲ. ಈಗ ಏನಿದ್ದರೂ ಹಿಂದುತ್ವ ಮಾತ್ರ

ಬೆಂಗಳೂರು: ಅಹಿಂದ ಸಮಾವೇಶವನ್ನು ಪಕ್ಷಾತೀತವಾಗಿ ಅವರು ಮಾಡುತ್ತಿದ್ದಾರೆ. ಪಕ್ಷದಿಂದ ಮಾಡ್ತಿದೀವಿ ಅಂತ ಹೇಳಲಿ. ಆಗ ಗೊತ್ತಾಗುತ್ತೆ ಕಾಂಗ್ರೆಸ್ ಅಹಿಂದಕ್ಕೆ ಸೇರಿರೋದು ಅಂತ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಗುರುವಾರ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಅವರಿಂದ ಹಿಂದ ಸಮಾವೇಶ ಆರಂಭ ವಿಷಯದ ಬಗ್ಗೆ ನಗರದಲ್ಲಿಂದು ಮಾಧ್ಯಮದ ಮಿತ್ರರೊಂದಿಗೆ ಮಾತನಾಡಿದ ಅವರು, ಈಗ ಜಾತಿ, ಹಿಂದ ಏನೂ ಇಲ್ಲ. ಈಗ ಏನಿದ್ದರೂ ಹಿಂದುತ್ವ ಮಾತ್ರ ಎಂದರು.
ಸದ್ಯ ಪಾಪ, ವಿಪಕ್ಷದವರ ಕ್ಷೇತ್ರಗಳೂ ಅಭಿವೃದ್ಧಿಯಾಗಲಿ. ಅವರ ಕ್ಷೇತ್ರಗಳಿಗೂ ಒಳ್ಳೆಯದು ಮಾಡಲಿ. ಅನುದಾನ, ಅಭಿವೃದ್ಧಿ ವಿಚಾರದಲ್ಲಿ ಪಕ್ಷ ನೋಡಬಾರದು. ಅದು ಒಳ್ಳೆಯ ಸಂಪ್ರದಾಯ. ಈ ಸಂಪ್ರದಾಯ ಮುಂದುವರೆಯಲಿ ಎಂದಿದ್ದಾರೆ.
ರಾಜ್ಯ ಬಜೆಟ್ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆ ಹಲವು ಪ್ರಸ್ತಾವನೆ ಕೊಟ್ಟಿದ್ದೇವೆ. ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ಕೊಡುವ ನಿರೀಕ್ಷೆ ಇದೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮಾಡಿ ಕೊಡುತ್ತೇನೆ ಅಂತ ಸಿಎಂ ಹೇಳಿದ್ದಾರೆ. ನೀರಾವರಿಗೆ ಆದ್ಯತೆ ನೀಡಿದ್ರೆ ಎಲ್ಲ ಸಮಸ್ಯೆಗಳೂ ಪರಿಹಾರ ಆಗುತ್ತವೆ. ಕೋವಿಡ್ ಸಂದರ್ಭದಲ್ಲಿ ನೀರಾವರಿ ಇಲಾಖೆ ಕಾಮಗಾರಿಗಳು ನಡೆಯಲಿಲ್ಲ. ಹೊಸ ಯೋಜನೆಗಳನ್ನೂ ಕೇಳಿದ್ದೇವೆ. ನೋಡೋಣ ಕೊಡ್ತಾರಾ ಇಲ್ವಾ ಅಂತ. ಇಷ್ಟೇ ಅಂತ ಕೇಳಿಲ್ಲ, ಹೆಚ್ಚು ಅನುದಾನ ಕೇಳಿದ್ದೇವೆ ಎಂದು ಹೇಳಿದರು.
ವಾಲ್ಮೀಕಿ ಸಮುದಾಯದಿಂದ ಮೀಸಲಾತಿಗೆ ಗಡುವು ವಿಚಾರದ ಕುರಿತು ಮಾತನಾಡಿದ ಅವರು, ಸಿಎಂ ಬಿಎಸ್ವೈ ಅವರು ಹುಟ್ಟು ಹೋರಾಟಗಾರರು ಇದನ್ನು ಸಿಎಂ ಸಮರ್ಥವಾಗಿ ನಿಭಾಯಿಸ್ತಾರೆ. ಸ್ವಾಮೀಜಿಗಳು ಗಡುವು ಕೊಟ್ಟಿರಬಹುದು. ಸಿಎಂ ಸಮರ್ಥವಾಗಿ ನಿಭಾಯಿಸಿ ಸರಿಪಡಿಸ್ತಾರೆ ಎಂದು ಹೇಳಿದರು.
ಬೆಳಗಾವಿ ಲೋಕಸಭೆ ಉಪಚುನಾವಣೆ ಟಿಕೆಟ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವರಿಷ್ಠರಿಗೆ, ಸಿಎಂಗೆ ನಮ್ಮ ಅಭಿಪ್ರಾಯ ಹೇಳಿದ್ದೇವೆ. ವರಿಷ್ಠರವನಿರ್ಧಾರಕ್ಕೆ ನಾವು ಬದ್ಧ. ನನ್ನ ಪುತ್ರ ಅಭ್ಯರ್ಥಿ ಆಗಲ್ಲ, ಅಭ್ಯರ್ಥಿ ಬಗ್ಗೆ ವರಿಷ್ಠರ ನಿರ್ಧಾರವೇ ಅಂತಿಮ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ಮಾತನಾಡಿದರು.