ಸ್ಯಾಂಡಲ್ವುಡ್ ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್ಐಆರ್ ದಾಖಲು
ಸದ್ಯ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ

ಬೆಂಗಳೂರು: ಹಣ ಪಡೆದು ವಂಚಿಸಿದ ಆರೋಪದಡಿ ಸ್ಯಾಂಡಲ್ವುಡ್ ನಿರ್ಮಾಪಕ ಗಂಡುಗಲಿ ಕೆ. ಮಂಜು ಸೇರಿದಂತೆ ನಾಲ್ವರ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೆಬ್ಬೆಟ್ಟು ರಾಮಕ್ಕ ಸಿನಿಮಾ ನಿರ್ಮಾಪಕರಾಗಿರುವ ಪುಟ್ಟರಾಜು ಎಂಬುವರು ಈ ದೂರು ನೀಡಿದ್ದು, ಕೆ. ಮಂಜು, ಬಿ.ಎಂ. ರಾಜಗೋಪಾಲ್, ರಮೇಶ್ ಬಾಬು ಹಾಗೂ ವಿಜಯಲಕ್ಷ್ಮಿ ಈ ನಾಲ್ವರ ವಿರುದ್ಧ ವಂಚನೆ, ಜೀವ ಬೆದರಿಕೆ ಹಾಗೂ ಅಪರಾಧ ಸಂಚು ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸದ್ಯ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಹೊಸಕೋಟೆ ತಾಲ್ಲೂಕಿನ ಸೊಣ್ಣೇನಹಳ್ಳಿ ಬಳಿ ಇರುವ ತಮ್ಮ ಜಮೀನನ್ನು ರಾಜಗೋಪಾಲ್ ಮಾರಾಟ ಮಾಡಿದ್ದರು. ಅದನ್ನು ಮೊದಲಿಗೆ ಖರೀದಿಸಿದ್ದ ಪುಟ್ಟರಾಜು, ಆರ್ಟಿಜಿಎಸ್ ಮೂಲಕ ಮುಂಗಡವಾಗಿ ಹಣ ನೀಡಿದ್ದರು.
ಅದೇ ಜಮೀನು ಖರೀದಿಸಲು ಮುಂದಾಗಿದ್ದ ನಿರ್ಮಾಪಕ ಕೆ. ಮಂಜು, ರಾಜಗೋಪಾಲ್ ಜೊತೆಯಲ್ಲಿ ಪ್ರತ್ಯೇಕವಾಗಿ ಒಪ್ಪಂದ ಮಾಡಿಕೊಂಡಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಪುಟ್ಟರಾಜು ಪ್ರಶ್ನಿಸಿದ್ದರು. ಪುಟ್ಟರಾಜು ಹೆಸರಿಗೆ ಜಮೀನು ನೋಂದಣಿ ಮಾಡಿಸುವುದಾಗಿ ಹೇಳಿ ಆರೋಪಿಗಳು ಮತ್ತಷ್ಟು ಹಣ ಪಡೆದಿದ್ದರು ಎಂದು ತಿಳಿಸಿದರು.
ಆರೋಪಿಗಳು ಜಮೀನು ನೋಂದಣಿ ಮಾಡಿಸಿರಲಿಲ್ಲ. ಹಣವನ್ನೂ ವಾಪಸು ಕೊಟ್ಟಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಪುಟ್ಟರಾಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದರು.