ಕೆಲ ದಿನಗಳಲ್ಲಿ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ ನೋಡಿ - ಮಾಜಿ ಸಚಿವ ಹೆಚ್.ಡಿ ರೇವಣ್ಣ
ನಾವು ಯಾವ ಎನ್ಡಿಎ ಯುಪಿಎ ಜೊತೆ ಕೂಡ ಮೈತ್ರಿ ಆಗೋದಿಲ್ಲ, ಇದೆಲ್ಲಾ ಸುಳ್ಳು ಸುದ್ದಿ

ಹಾಸನ: ಬಿಜೆಪಿಯವರು ಗ್ರಾಮ ಪಂಚಾಯತ್ ಸದಸ್ಯರಿಗೆ ಅಮಿಷವೊಡ್ಡುತ್ತಿದ್ದಾರೆ, ನಾವು ಜಿಲ್ಲಾಧಿಕಾರಿಗಳಿಗೆ ಹೇಳಿ ಕ್ಯಾಟಗಿರಿ ಚೆಂಜ್ ಮಾಡುತ್ತೇವೆ ಅನ್ನುತ್ತಿದ್ದಾರೆ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ಈ ರೀತಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗ್ರಾಮ ಪಂಚಾಯತ್ ಮೀಸಲಾತಿ ಪ್ರಕಟ ಹಿನ್ನೆಲೆ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮಾತನಾಡುವ ವಾಯ್ಸ್ ರೆಕಾರ್ಡ್ ಇದೆ, ಅದನ್ನು ಕಾಲ ಬಂದಾಗ ಬಿಡುಗಡೆ ಮಾಡುತ್ತೇವೆ. ಈ ಮೊದಲೇ ರಿಸರ್ವೇಷನ್ ಮಾಡಬೇಕಿತ್ತು ಇವರು ಲೇಟ್ ಆಗಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ರಾಜ್ಯ ಚುನಾವಣೆ ಆಯೋಗ ಸತ್ತು ಹೋಗಿದೆ. ಗ್ರಾಮ ಪಂಚಾಯತಿ ಮೀಸಲಾತಿ ಬಗ್ಗೆ ಬಿಜೆಪಿ ನಾಯಕರೊಬ್ಬರು ಜಿಲ್ಲಾದಿಕಾರಿ ಕಛೇರಿಯಲ್ಲಿ ಎರಡು ಘಂಟೆ ಮೀಟಿಂಗ್ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ನಾವು ಜಿಲ್ಲಾಧಿಕಾರಿಗಳ ಕಛೇರಿ ಬಳಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಸದಸ್ಯರು ಬೆಳಗ್ಗೆ ಕಾಂಗ್ರೆಸ್, ರಾತ್ರಿ ಬಿಜೆಪಿ ಅನ್ನುತ್ತಿದ್ದಾರೆ. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಕ್ಯಾಟಗಿರಿಯನ್ನು ಆರು ತಿಂಗಳ ಮೊದಲೆ ಅನೌನ್ಸ್ ಮಾಡಬೇಕು. ಮಾಡಲಿಲ್ಲ ಅಂದ್ರೆ ನಾವು ಕೋರ್ಟ್ ಮೊರೆ ಹೋಗುತ್ತೇವೆ. ಕೆಲ ದಿನಗಳಲ್ಲಿ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎನ್ಡಿಎ ಜೊತೆ ಮೈತ್ರಿ ವಿಚಾರ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾವ ಎನ್ಡಿಎ ಯುಪಿಎ ಜೊತೆ ಕೂಡ ಮೈತ್ರಿ ಆಗೋದಿಲ್ಲ, ಇದೆಲ್ಲಾ ಸುಳ್ಳು ಸುದ್ದಿ ಎಂದು ಹೆಚ್ ಡಿ ರೇವಣ್ಣ ಅವರು ಮಾತನಾಡಿದರು.