ಮನೆಗೆ ನುಗ್ಗಲು ದರೋಡೆಕೋರರ ಯತ್ನ: ಮಹಿಳೆ ಬಚಾವ್ ಆಗಿದ್ದು ಹೇಗೆ ಗೊತ್ತಾ?

ಆರು ಮಂದಿ ದರೋಡೆಕೋರರು ಮನೆ ಬಾಗಿಲು ಮುರಿದು ದರೋಡೆಗೆ ಯತ್ನಿಸುತ್ತಿದ್ದರೂ ಬೆದರದ ಮಹಿಳೆ ಧೈರ್ಯ, ಸಾಹಸದಿಂದ ಸಮಯಪ್ರಜ್ಞೆ ಮೆರೆದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರು ಹೊರವಲಯದ ಬೇಗೂರು ಬಳಿಯ ಮನೆಯೊಂದರಲ್ಲಿ ಅಕ್ಟೋಬರ್ 8ರಂದು ತಡರಾತ್ರಿ 3.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಬಾಗಿಲು ಮುರಿದು ಮನೆಯೊಳಗೆ ನುಗ್ಗಲು 6 ಮಂದಿ ದರೋಡೆಕೋರರು ಯತ್ನಿಸಿದರು. ಈ ವೇಳೆ ಮಹಿಳೆಯ ಸಮಯಪ್ರಜ್ಞೆಯಿಂದ ಕಳ್ಳರು ಪರಾರಿಯಾಗಿದ್ದಾರೆ.
ದರೋಡೆಕೋರರು ಬಾಗಿಲು ಹೊಡೆಯುವ ಶಬ್ದಕ್ಕೆ ಕುಟುಂಬ ಎಚ್ಚರಗೊಂಡಿತು. ಈ ಸಂದರ್ಭದಲ್ಲಿ ಧೈರ್ಯ ತೋರಿದ ರೂಪ ಪೊಲೀಸರಿಗೆ ಕರೆ ಮಾಡಿದರು. ಐದಾರು ಬಾರಿ ಕರೆ ಮಾಡಿದರೂ ಪೊಲೀಸರು ಕರೆ ಸ್ವೀಕರಿಸಲಿಲ್ಲ. ಆದರೂ ಧೈರ್ಯ ಕುಂದದೆ ಸತತವಾಗಿ ಪ್ರಯತ್ನಿಸುತ್ತಲೇ ಇದ್ದರು.
7ನೇ ಬಾರಿ ಕರೆ ಮಾಡಿದಾಗ ಪೊಲೀಸರು ಕರೆಯನ್ನು ಸ್ವೀಕರಿಸಿದರು. ಇದೇ ವೇಳೆ ಜೋರಾಗಿ ಕೂಗುತ್ತಾ ಒಳಗೆ ನಾವು ಎಚ್ಚರವಾಗಿದ್ದೇವೆ ಎಂದು ಕಳ್ಳರಿಗೆ ಎಚ್ಚರಿಕೆ ರವಾನಿಸುತ್ತಲೇ ಇದ್ದರು. ಇದರಿಂದ ಒತ್ತಡಕ್ಕೆ ಒಳಗಾದ ದರೋಡೆಕೋರರು ಗಡಿಬಿಡಿಗೆ ಒಳಗಾದರು.
ಅಷ್ಟರಲ್ಲಿ ಹೊಯ್ಸಳ ವಾಹನ ಬರುವುದನ್ನು ಗಮನಿಸಿದ ದರೋಡೆಕೋರರು, ಓಡಿ ಹೋಗಿದ್ದಾರೆ. ಬೇಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ.